Tuesday 16 January 2018

ಸ್ವಾಮೀಜಿಗೆ ನೂರಾ ಐವತ್ತು ವರುಷ

ವಿಶ್ವವಿಜೇತ ಶ್ರೀ ಸ್ವಾಮಿ ವಿವೇಕಾನಂದ ಜನಿಸಿ ಇಂದಿಗೆ ಸರಿಸುಮಾರು ನೂರಾ ಐವತೈದು ವರುಷಗಳೇ ಸಂದಿವೆ ಆದರೂ ಅವರ ಆದರ್ಶಗಳು ಅಭಿವಂದನೀಯ ಹಾಗು ಇಂದಿನ ಮನಸ್ಥಿತಿಗೆ ಆದರ್ಶಪ್ರಾಯ. ಇಂದು ಸ್ವಾಮಿ ವಿವೇಕಾನಂದರ ಕುರಿತು ಒಂದೆರಡು ಮಾತುಗಳನ್ನು ಬರೆಯಬೇಕು ಎಂದು ನನಗನಿಸುತ್ತಿದೆ ಯಾಕೋ ಗೊತ್ತಿಲ ಇಂದಿನ  ಯುವಜನತೆಯ ಮನಸ್ಥಿತಿ ನನಗೆ ಅರ್ಥವಾಗುತ್ತಿಲ್ಲ ಯಾಕೆ ಅಂತೀರಾ ... ಅಂತಹ ಮಹಾನ್ ದೇಶಭಕ್ತ ಸಾಧಕನನ್ನು ತಮ್ಮ ಆದರ್ಶಪ್ರಾಯವಾಗಿಟ್ಟುಕೊಳ್ಳುವುದನ್ನು ಬಿಟ್ಟು ಇಂದಿನ ಕಾಂಜಿ ಪಿಂಜಿ ಸಿನಿಮಾ ನಟರನ್ನು ಆದರ್ಶಪ್ರಾಯವಾಗಿಟ್ಟುಕೊಂಡು ಅವರೇ ನಮ್ಮ ಹೀರೋ ಎಂದು ಬೀಗುತ್ತಿದ್ದರೆ ನಮ್ಮ ಕರುಳು ಚುರುಕ್ ಎನ್ನುತ್ತದೆ , ಯಾಕೆ ಅಂತೀರಾ ಇಂದು ದೇಶದಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ನಾನು ಹಾಯಾಗಿದ್ದೇನೆ ನನಗೇನು ಎಂದು ಮನೆಯಲಿ  ಎಸಿ ಹಾಕಿಕೊಂಡು ನಾನು ತಣ್ಣಗಿದ್ದೇನೆ ಎಂದು ಆರಾಮಾಗಿ ಹಾಯಾಗಿ ಮಲಗಿರುವ ನಾಯಕರೆಲ್ಲಿ   ? ನನ್ನ ದೇಶ ಬಡತನದಲ್ಲಿಡೇ ಹಾಗಾಗಿ ಸುಖದ ಸುಪ್ಪತ್ತಿಗೆಯಲ್ಲಿ ನಾನು ಹೇಗೆ ಮಲಗಲಿ ಎಂದು  ದೇಶವನ್ನು ನೆನೆದು ನೆಲದಲ್ಲೇ ಮಲಗಿದೆ ಸ್ವಾಮಿ ವಿವೇಕಾನಂದರೆಲ್ಲಿ ? ಬರೆಯುತ್ತಾ ಹೋದಂತೆ ಇನ್ನು ಅನೇಕ ಕತೆಗಳು ನನ್ನ ಕಣ್ಣ ಮುಂದೆ ಬರುವುದು .... ಆ ಮಹಾತ್ಮನ ಹುಟ್ಟು ಹಬ್ಬವನ್ನು ರಾಮಕೃಷ್ಣ ತಪೋವನದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು . 


ಸ್ವಾಮಿ ವಿವೇಕಾನಂದರನ್ನು ನಾವು ಆದರ್ಶಪ್ರಾಯವಾಗಿಟ್ಟುಕೊಂಡು ಏಕೆ ಕೆಲಸ ಮಾಡಬೇಕು ಎಂದು ನೀವು ಯೋಚಿಸುತ್ತಿದ್ದೀರಾ ? ಕಾರಣವಿಷ್ಟೇ , ಸ್ವಾಮಿ ವಿವೇಕಾನಂದರು ಅಂದು ದೇಶದ ಐತಿಹಾಸಿಕ ಸಂಸ್ಕೃತಿಗಳ ವಿಚಾರವನ್ನು ತಿಳಿಸಲು ವಿದೇಶಕ್ಕೆ ಹೋಗಿದ್ದಂತಹ  ಸ್ವಾಮಿ ವಿವೇಕಾನಂದರು ತಮ್ಮ ದೇಶವನ್ನು ನೆನೆದು ಕಣ್ಣೀರಿಡುತ್ತಿದ್ದರು . ನನ್ನ ದೇಶದಲ್ಲಿ ಸಾವಿರಾರು ಮಂದಿ ಬಡಜನರು ಹೊಟ್ಟೆಗೆ ಹಿಟ್ಟಿಲ್ಲದೆ ಮರುಗುತ್ತಿದ್ದರೆ ನಾನು ಹೇಗೆ ತಾನೆ ಖುಷಿಯಿಂದ ಬದುಕಲಿ ಎಂದು ಮರುಗುತ್ತಿದ್ದರು . ಅಂತಹ ಅದಮ್ಯ ಚೇತನ  ಶ್ರೀ ಸ್ವಾಮಿ ವಿವೇಕಾನಂದ . ಇಂತಹ ಪುಣ್ಯ ಮಹಾನ್ ಚೇತನವನ್ನು ನಾವಿಂದು ಮರೆಯುತ್ತಿದ್ದೇವೆ ಈ ರೀತಿ ಆಗದಂತೆ ಇನ್ನಾದರೂ ಎಚ್ಚರಿಕೆಯಿಂದ ಸ್ವಾಮಿ ವಿವೇಕಾನಂದರ ವಾಣಿಯನ್ನು ನಾವು ಎಂದಿಗೂ ಮರೆಯಬಾರದು .

" ಕುದಿಯದ ರಕ್ತ ,ರಕ್ತವೇ ಅಲ್ಲ
ಮಿಡಿಯದ ಹೃದಯ ಹೃದಯವೇ ಅಲ್ಲ
ದೇಶಕ್ಕಾಗಿ ಬಾಳದ ಬದುಕು
ಬದುಕೇ ಅಲ್ಲ ನರಕವದು

Wednesday 3 January 2018

ಶ್ರೀ ಶಾರದಾದೇವಿ ನಿಮಗೆ ನಮೋ ನಮಃ

ಶ್ರೀರಾಮಕೃಷ್ಣ ಪರಮಹಂಸರ ಪತ್ನಿಯಾದ ಶ್ರೀಮಾತೆ ಶಾರದಾ ದೇವಿ ಅವರು ಶ್ರೀ ರಾಮಕೃಷ್ಣ ಆಧ್ಯಾತ್ಮಿಕ ಪರಂಪರೆಗೆ ಮಹತ್ವದ ಕೊಡುಗೆ ನೀಡಿದವರಾಗಿದ್ದಾರೆ. ‘ಶ್ರೀ ಮಾ’ ಎಂದು ಶ್ರೀ ರಾಮಕೃಷ್ಣರ ಅನುಯಾಯಿಗಳಿಂದ ಸಂಬೋಧಿಸಲ್ಪಡುತ್ತಿದ್ದ ಶ್ರೀ ಶಾರದಾ ದೇವಿಯವರು ದಕ್ಷಿಣೇಶ್ವರದಲ್ಲಿ ಸ್ಥಾಪಿತಗೊಂಡ ಶ್ರೀ ಶಾರದ ಮಠ ಮತ್ತು ಶ್ರೀ ರಾಮಕೃಷ್ಣ ಶಾರದಾ ಮಿಷನ್ನಿನ ಆಧ್ಯಾತ್ಮಿಕ ಪ್ರೇರಕ ಶಕ್ತಿ.
ಜೀವನದಲ್ಲಿ ನಾವೆಲ್ಲರೂ ಕಷ್ಟಗಳು ಅಥವಾ ಕಷ್ಟಗಳು ಎಂದುಕೊಳ್ಳುವಂತಹ ಘಟನೆಗಳನ್ನು ಕಾಣುತ್ತಿರುತ್ತೇವೆ. ನಾವು ಕಷ್ಟಗಳು ಎಂದುಕೊಂಡಿರುವ ಗಾತ್ರದ ಹಲವು ಪಟ್ಟು ಹೆಚ್ಚು ಕಷ್ಟಪಡುತ್ತಿರುವ ಜನರನ್ನು ಪ್ರತಿನಿತ್ಯ ಕಾಣುತ್ತಲೇ ಇರುತ್ತೇವೆ. ಆ ಕಷ್ಟಗಳು ನಮ್ಮನ್ನು ಆದಷ್ಟು ಬಿಟ್ಟು ಹೋಗಬೇಕು ಎಂದು ತವಕಿಸುವುದು ಈ ಲೋಕದ ನಿತ್ಯ ಅನುಭವ. ಹಾಗಾಗಿ ನಮ್ಮ ದೃಷ್ಟಿ ಕಷ್ಟಗಳೆಂಬ ಕತ್ತಲೆಯ ಕಡೆಗೆ ನೆಟ್ಟಿರುವಷ್ಟು, ಬಿಡುಗಡೆಯ ಮುಕ್ತಿಯೆಂಬ ಬೆಳಕಿನ ಕಡೆಗೆ ಹೊರಳುವುದೇ ಇಲ್ಲ. ಜಗತ್ತಿನಲ್ಲಿ ಕಷ್ಟಗಳ ನಡುವೆ ಇದ್ದು ಬೆಳಕಿನತ್ತ ಮುಖ ಮಾಡಿನಿಂತ ಅಪೂರ್ವ ವ್ಯಕ್ತಿತ್ವ ಶ್ರೀಮಾತೆ ಶಾರದಾದೇವಿಯವರದ್ದು.
ಸ್ವಾಮಿ ನಿತ್ಯಾನಂದರು ಬರೆದಿರುವ ಶ್ರೀಮಾತೆ ಶಾರದಾದೇವಿ ಪುಸ್ತಕದ ಹಿಂಬದಿಯಲ್ಲಿ ಈ ಮಾತುಗಳಿವೆ “ಶ್ರೀಮಾತೆಯವರ ಬದುಕು ಕೆಸರಿನಲ್ಲಿ ಅರಳಿದ ಕಮಲದಂತೆ. ಕೆಳಗೆ ನೋಡಿದರೆ ಸಂಸಾರದ ಕೆಸರು, ಕೊಳೆ, ಕಲ್ಮಶ ಎಲ್ಲಾ ಇವೆ. ಆದರೆ ಕಮಲ, ಕೆಳಗೆ ನೋಡುವುದಿಲ್ಲ, ಮೇಲೆ ನೋಡುವುದು, ಯಾವಾಗಲೂ ಸೂರ್ಯನ ದಿಕ್ಕಿಗೆ ತಿರುಗುವುದು. ಶ್ರೀಮಾತೆಯವರ ಜೀವನವೇ ಇದಕ್ಕೆ ಸಾಕ್ಷಿ. ಕೆಳಗೆ ನೋಡಬೇಡಿ. ಅಲ್ಲಿ ಕೊಳೆ ಇದೆ, ಕೆಸರಿದೆ ಎಂದು ತಪ್ಪು ಕಂಡು ಹಿಡಿಯಬೇಡಿ. ಕೆಸರಿನ ಲಕ್ಷಣವೇ ಅದು. ಆದರೆ ಮೇಲೆ ನೋಡಿ, ಆಗ ಭಗವಾನ್ ಸೂರ್ಯನನ್ನು ಕಾಣುತ್ತೇವೆ. ಕೆಳಗಿರುವುದನ್ನು ರಿಪೇರಿ ಮಾಡಲು ಹೋಗಬೇಡಿ. ಅದು ರಿಪೇರಿ ಆಗುವುದಕ್ಕೆ ಕಾಯುತ್ತಿಲ್ಲ. ಆದರೆ ಮೇಲೆ ನೀವು ನೋಡಿ. ಆಗ ಅವನ ದರ್ಶನ ನಿಮಗಾಗುವುದು.”
ಶಾರದಾ ದೇವಿ ಅವರು ಡಿಸೆಂಬರ್ 22, 1853ರಂದು ಪಶ್ಚಿಮ ಬಂಗಾಳದ ಜಯರಾಂಬಟಿ ಎಂಬಲ್ಲಿ ಜನಿಸಿದರು. ಅವರ ಅಂದಿನ ಹೆಸರು ಶಾರದಾಮಣಿ ಮುಖೋಪಾಧ್ಯಾಯ್. ಅವರ ತಂದೆಯ ಹೆಸರು ರಾಮಚಂದ್ರ ಮುಖೋಪಾಧ್ಯಾಯ್ ಮತ್ತು ತಾಯಿ ಶ್ಯಾಮ ಸುಂದರ ದೇವಿ. ತಂದೆ ಬಡರೈತರಾಗಿದ್ದು ಜೊತೆಗೆ ಪೂಜಾರಿಯಾಗಿ ತಮ್ಮ ದೊಡ್ಡ ಸಂಸಾರವನ್ನು ನಿರ್ವಹಿಸುತ್ತಿದ್ದರು. ಶಾರದಾ ದೇವಿ ಅವರಿಗೆ ಬಾಲ್ಯದಲ್ಲೇ ಪೌರಾಣಿಕ ಕಥೆಗಳನ್ನು ಕೇಳುವುದರಲ್ಲಿ ಅಪಾರ ಆಸಕ್ತಿ. ಮನೆಯ ಕೆಲಸಗಳನ್ನು ಮಾಡುವುದರಲ್ಲಿ ತಾಯಿಗೆ ಹೆಗಲು ನೀಡುವುದರ ಜೊತೆಗೆ ಇತರರಿಗೆ ಸಹಾಯ ಮಾಡುವ ಗುಣ ಸಹಾ ಅವರಲ್ಲಿ ಮಡುಗಟ್ಟಿತ್ತು. 1864ರ ಅವಧಿಯಲ್ಲಿ ಕ್ಷಾಮ ಪರಿಸ್ಥಿತಿ ಏರ್ಪಟ್ಟ ಸಂದರ್ಭದಲ್ಲಿ ಈಕೆ ತನ್ನ ತಂದೆ ತಾಯಿಗಳ ಜೊತೆ ಸೇರಿ, ಹಸಿದ ಜನರಿಗೆ ಜೀವ ಉಳಿಸಿಕೊಳ್ಳುವುದಕ್ಕೆ ಹಗಲಿರುಳೂ ಸಹಾಯ ಮಾಡಿದರು. ಮಣ್ಣಿನಲ್ಲಿ ಕಾಳಿ ಮತ್ತು ಲಕ್ಷ್ಮಿ ವಿಗ್ರಹಗಳನ್ನು ಮಾಡಿ ಪೂಜಿಸುವುದು ಆಕೆಗೆ ಬಲು ಇಷ್ಟವಾದ ಚಟುವಟಿಕೆಯಾಗಿತ್ತು. ಚಿಕ್ಕಂದಿನಿಂದಲೇ ಆಳವಾದ ಧ್ಯಾನದಲ್ಲಿ ತೊಡಗುತ್ತಿದ್ದುದು ಶಾರದದೇವಿಯವರಿಗೆ ರೂಢಿಯಾಗಿತ್ತಂತೆ.
ಇತ್ತ ಯಾವಾಗಲೂ ಪೂಜೆ ಪುನಸ್ಕಾರ ಧ್ಯಾನಗಳಲ್ಲಿ ಮುಳುಗಿ ಸಾಮಾನ್ಯರ ಬದುಕಿಗೆ ವ್ಯತಿರಿಕ್ತವಾಗಿ ಬದುಕುತ್ತಿದ್ದ ತಮ್ಮ ಮಗನಿಗೆ ಮದುವೆ ಮಾಡಿದರೆ ಆತ ಎಲ್ಲರಂತೆ ಸಹಜವಾಗಿರುತ್ತಾನೆ ಎಂದು ಭಾವಿಸಿದ ಶ್ರೀ ರಾಮಕೃಷ್ಣ ಪರಮಹಂಸರ ತಂದೆ ತಾಯಂದಿರು ಆತನಿಗೆ ಮದುವೆಯ ಏರ್ಪಾಡು ಮಾಡಿದರು. ಶ್ರೀ ರಾಮಕೃಷ್ಣರೇ, ಶಾರದಾ ದೇವಿಯನ್ನು ಮದುಮಗಳಾಗಿ ಸೂಚಿಸಿದರೆಂಬ ಮಾತೂ ಇದೆ. ಹೀಗೆ ಕೇವಲ ಐದು ವರ್ಷದಲ್ಲಿರುವಾಗಲೇ ಶ್ರೀ ಶಾರದಾದೇವಿ ಅವರಿಗೆ ಶ್ರೀ ರಾಮಕೃಷ್ಣ ಪರಮಹಂಸರೊಡನೆ 1853ರ ವರ್ಷದಲ್ಲಿ ವಿವಾಹವಾಗಿತ್ತು. ಆಗ ಶ್ರೀ ರಾಮಕೃಷ್ಣರ ವಯಸ್ಸು 23. ಅಂದಿನ ಬಂಗಾಳಿ ಸಂಪ್ರದಾಯಗಳಲ್ಲಿ ವಧೂವರರಲ್ಲಿ ಇಂತಹ ವಯಸ್ಸಿನ ಅಂತರ ಸರ್ವೇಸಾಧಾರಣವಾಗಿತ್ತು.
ವಿವಾಹದ ನಂತರದಲ್ಲಿ ತನ್ನ ತಂದೆ ತಾಯಂದಿರ ಪೋಷಣೆಯಲ್ಲೇ ಇದ್ದ ಶಾರದಾ ದೇವಿ, ತಮ್ಮ 14ನೆಯ ವಯಸ್ಸಿನಲ್ಲಿ ಶ್ರೀ ರಾಮಕೃಷ್ಣರಿದ್ದ ಕಾಮಾಪುಕುರಕ್ಕೆ ಬಂದು ಮೂರು ತಿಂಗಳು ಅವರ ಜೊತೆಯಲ್ಲಿದ್ದರು. ಈ ಸಮಯದಲ್ಲಿ ಶ್ರೀ ರಾಮಕೃಷ್ಣರು ಆಕೆಗೆ ಆಧ್ಯಾತ್ಮದಲ್ಲಿನ ಸಾಧನೆ, ವೈರಾಗ್ಯ ಮತ್ತು ಗುರಿಗಳ ಬಗ್ಗೆ ತಿಳಿಸಿಕೊಟ್ಟರು. ಮೂರು ತಿಂಗಳ ನಂತರದಲ್ಲಿ ಪುನಃ ಶಾರದಾ ದೇವಿ ತವರಿನಲ್ಲಿದ್ದರು. ಶ್ರೀ ರಾಮಕೃಷ್ಣರು ಆಗಾಗ ಭಾವ ಸಮಾಧಿಗೆ ಇಳಿಯುತ್ತಿದ್ದುದು ಬಹಳಷ್ಟು ಸಾಮಾನ್ಯ ಜನರ ಕಣ್ಣಿಗೆ ಹುಚ್ಚಾಗಿ ಕಂಡರೆ, ಕೆಲವೊಂದು ಜನರಿಗೆ ಅವರು ಮಹಾನ್ ಸಾಧುವಾಗಿ ಕಾಣತೊಡಗಿದರು. ಶ್ರೀ ರಾಮಕೃಷ್ಣರ ಮಾನಸಿಕ ಆರೋಗ್ಯದ ಬಗ್ಗೆ ಹಲವು ಮಾತುಗಳನ್ನು ಕೇಳಿದ್ದ ಶ್ರೀ ಶಾರದಾ ದೇವಿ ಅವರು, 1872ರಲ್ಲಿ 18ನೆಯ ವಯಸ್ಸಿನಲ್ಲಿ ತಮ್ಮ ಸ್ವಇಚ್ಚೆಯ ಮೇರೆಗೆ ದಕ್ಷಿಣೇಶ್ವರಕ್ಕೆ ಬಂದರು. ಅವರಿಗೆ ಶ್ರೀ ರಾಮಕೃಷ್ಣರು ಕರುಣಾಳುವಾಗಿಯೂ, ಸಹಾನುಭೂತಿಯುಳ್ಳವರಾಗಿಯೂ ಕಂಡುಬಂದರು. ಅವರಿಗೆ ಶೀಘ್ರದಲ್ಲೇ ಶ್ರೀ ರಾಮಕೃಷ್ಣರು ಸಾಮಾನ್ಯತೆಯಿಂದ ಹೊರಗೆ ಏರಿರುವ ಆಧ್ಯಾತ್ಮದ ಆಳದ ಅರಿವಾಯಿತು.
ದಕ್ಷಿಣೇಶ್ವರದಲ್ಲಿ ಶ್ರೀ ಶಾರದಾದೇವಿಯವರು ಒಂದು ಸಣ್ಣ ಕೋಣೆಯಲ್ಲಿ ಇರುತ್ತಿದ್ದರು. ಶ್ರೀ ರಾಮಕೃಷ್ಣರಿಗೆ ಮತ್ತು ಅವರನ್ನು ನೋಡಲು ಬರುತ್ತಿದ್ದವರಿಗೆ ಆಹಾರ ತಯಾರಿಸುವುದು ಅವರ ಕಾರ್ಯವಾಗುತ್ತಿತ್ತು. ಶ್ರೀ ರಾಮಕೃಷ್ಣರು ಶಾರದಾ ದೇವಿ ಅವರಿಗೆ ಮಂತ್ರಗಳನ್ನು ಹೇಳಿಕೊಟ್ಟಿದ್ದರು ಮತ್ತು ಹೇಗೆ ಜನರನ್ನು ಆಧ್ಯಾತ್ಮದ ಹಾದಿಗೆ ಪ್ರೇರಿಸಿ ಮಾರ್ಗದರ್ಶಿಸಬೇಕೆಂದು ಕೂಡಾ ಹೇಳುತ್ತಿದ್ದರು. ಶ್ರೀ ಶಾರದಾ ದೇವಿ ಅವರನ್ನು ಕಾಳಿಯ ಸ್ವರೂಪ ಎಂದೇ ಬಗೆದು ‘ಶ್ರೀ ಮಾ’ ಎಂದೇ ಅವರನ್ನು ಆಧ್ಯಾತ್ಮ ಭಾವದಲ್ಲಿ ಸಂಬೋಧಿಸುತ್ತಿದ್ದ ಶ್ರೀ ರಾಮಕೃಷ್ಣರು, ಅವರನ್ನು ಮಣೆಯ ಮೇಲೆ ಕಾಳಿಯ ಸ್ಥಾನದಲ್ಲಿ ಕುಳ್ಳಿರಿಸಿ ತ್ರಿಪುರಸುಂದರಿ ಮಾತೆ ಎಂದು ಶೋಡಷ ಪೂಜೆಯನ್ನು ಸಲ್ಲಿಸುತ್ತಿದ್ದರಂತೆ.
ಯಾವಾಗಲೂ ಶಾರದಾ ಮಾತೆಯವರು ತೆರೆಯ ಮರೆಯಲ್ಲೇ ಇರುತ್ತಿದ್ದರೂ ಅನೇಕ ಸ್ತ್ರೀಯರು ಶಾರದಾ ಮಾತೆಯವರ ವ್ಯಕ್ತಿತ್ವಕ್ಕೆ ಮಾರುಹೋಗಿ ಅವರ ಬಳಿ ಬಂದು ಜೀವನಪರ್ಯಂತ ಅವರ ಸಹಜೀವಿಗಳಾದರು.
ಶ್ರೀ ರಾಮಕೃಷ್ಣರು ತಮ್ಮ ಜೀವನದ ಕೊನೆಯ ದಿನಗಳಲ್ಲಿ ಗಂಟಲಿನ ಕ್ಯಾನ್ಸರ್ ಬೇನೆಗೆ ತುತ್ತಾದಾಗ ಶ್ರೀ ಮಾತೆ ಶಾರದಾ ದೇವಿ ಅವರು ಅವರಿಗೆ ಉಪಚಾರ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಆಗಸ್ಟ್ 1886ರಲ್ಲಿ ಶ್ರೀ ರಾಮಕೃಷ್ಣ ಪರಮಹಂಸರು ನಿಧನರಾದ ಸಂದರ್ಭದಲ್ಲಿ ಶ್ರೀ ಮಾತೆಯವರು ವಿಧವೆಯಾಗಿ ತಮ್ಮ ಸುಮಂಗಲಿ ಲಕ್ಷಣಗಳನ್ನು ತೆಗೆಯಲು ಪ್ರಯತ್ನಿಸಿದಾಗಲೆಲ್ಲಾ ಶ್ರೀ ರಾಮಕೃಷ್ಣರು “ನಾನು ಒಂದು ಕೊಟಡಿಯಿಂದ ಮತ್ತೊಂದು ಕೊಟಡಿಗೆ ಹೋಗಿದ್ದೇನಷ್ಟೇ” ಎಂದು ಅನುಜ್ಞೆ ನೀಡಿ ತಮ್ಮನ್ನು ತಡೆದುದಾಗಿ ಹೇಳಿದ್ದಾರೆ.
ಶ್ರೀ ರಾಮಕೃಷ್ಣರ ನಿಧನಾನಂತರದಲ್ಲಿ ಶ್ರೀ ಮಾತೆ ಶಾರದಾ ದೇವಿ ಅವರು ಹಲವಾರು ಪುಣ್ಯ ಕ್ಷೇತ್ರಗಳಿಗೂ, ದೇಶದ ವಿವಿದೆಡೆಗಳಲ್ಲಿ ಸ್ವಾಮಿ ವಿವೇಕಾನಂದರ ನೇತೃತ್ವದಲ್ಲಿ ಶ್ರೀ ರಾಮಕೃಷ್ಣರ ಶಿಷ್ಯರು ಸ್ಥಾಪಿಸಿದ ಶ್ರೀ ರಾಮಕೃಷ್ಣ ಮಿಷನ್ನಿನ ಹಲವು ಶಾಖೆಗಳಿರುವ ಸ್ಥಳಗಳಿಗೆ ಭೇಟಿ ನೀಡಿದ್ದರು. ಅವರ ಜೀವನ ಬಡತನದ ಜೊತೆಗೆ ಮತ್ತು ಅವರ ನಿಧನರಾದ ಅವರ ಸಹೋದರರ ಸಂಸಾರ ತಾಪತ್ರಯಗಳಿಗೆ ಹೆಗಲುಕೊಟ್ಟು ಕಷ್ಟಪಡುವಂತಹ ಸ್ಥಿತಿಗಳಲ್ಲಿ ಬಳಲುವಂತಾಯ್ತು. ಇವೆಲ್ಲವುಗಳ ನಡುವೆಯೂ ಶಾಂತಿಯನ್ನು ಕಾಪಾಡಿಕೊಂಡು ಶ್ರೀ ರಾಮಕೃಷ್ಣರ ಶಿಷ್ಯರಿಗೆ ಮಾತೆಯಾಗಿ ತಮ್ಮ ಬಳಿ ಬರುವವರಿಗೆ ಆಧ್ಯಾತ್ಮದ ಸಿಂಚನವನ್ನು ನೀಡುತ್ತಾ ತಮ್ಮ ಜೀವನವನ್ನು ನಡೆಸಿದರು. ಸಹೋದರಿ ನಿವೇದಿತಾ, ಸಹೋದರಿ ದೇವಮಾತಾ ಹಾಗೂ ಶ್ರೀ ರಾಮಕೃಷ್ಣರ ಶಿಷ್ಯರು ಶ್ರೀಮಾತೆ ಅವರು ವಾತ್ಸಲ್ಯದ ಮಾತೃಭಾವದೊಂದಿಗೆ ಭಕ್ತಿಭಾವದಿಂದಿದ್ದರು.
ಶ್ರೀಮಾತೆಯವರ ಕೆಲವೊಂದು ದಿವ್ಯ ಸೂಕ್ತಿಗಳು ಇಂತಿವೆ:
“ಮನುಷ್ಯನ ಬುದ್ಧಿ ಎಷ್ಟು ಅಲ್ಪ! ಅವನಿಗೆ ಬೇಕಾಗಿರುವುದೇ ಒಂದಾದರೆ ಅವನು ಕೇಳುವುದೇ ಇನ್ನೊಂದು. ಶಿವನನ್ನು ಮಾಡಲು ಹೋಗಿ ಮಂಗನ ಮೂತಿ ಮಾಡಿಡುತ್ತಾನೆ. ಆದ್ದರಿಂದ ಆಸೆಗಳನ್ನೆಲ್ಲಾ ಭಗವಂತನ ಪಾದಗಳಲ್ಲಿ ಸಮರ್ಪಿಸಿಬಿಡುವುದೇ ಒಳ್ಳೆಯದು. ಅವನು ನಮಗೆ ಯಾವುದು ಒಳ್ಳೆಯದೋ ಅದನ್ನು ಮಾಡಲಿ. ಆದರೆ ಭಕ್ತಿ ವೈರಾಗ್ಯಗಳನ್ನು ಕೇಳಿಕೊಳ್ಳಬಹುದು. ಅವನ್ನು ಆಸೆಗಳ ಗುಂಪಿಗೆ ಸೇರಿಸಲಾಗುವುದಿಲ್ಲ.”
“ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಭಗವಂತನನ್ನು ಆಸೆಗಳಿಂದ ಪಾರುಮಾಡು ಎಂದು ಕೇಳಿಕೊಳ್ಳಬೇಕು. ಏಕೆಂದರೆ ಆಸೆಯೇ ಎಲ್ಲ ದುಃಖದ ಮೂಲ. ಮತ್ತೆ ಮತ್ತೆ ಜನನ ಮರಣಗಳಿಗೆ ತಳ್ಳುವುದೂ ಆಸೆಯೇ. ಮುಕ್ತಿಯ ಮಾರ್ಗದಲ್ಲಿ ಅದೇ ಅಡ್ಡಿ.”
“ಪ್ರಾಪಂಚಿಕ ಸಂಬಂಧಗಳು ಶಾಶ್ವತವಲ್ಲ. ಇಂದು ಅವೇ ಜೀವನದ ಸಾರಸರ್ವಸ್ವವೋ ಎಂಬಂತೆ ತೋರುತ್ತದೆ. ಆದರೆ ನಾಳೆ ಎಲ್ಲವೂ ಮಾಯವಾಗುತ್ತವೆ. ನಿನ್ನ ನಿಜವಾದ ಸಂಬಂಧ ದೇವರೊಂದಿಗೆ ಮಾತ್ರ.”
“ನೀನು ಮನುಷ್ಯ ಮಾತ್ರರನ್ನು ಪ್ರೀತಿಸಿದ್ದೆ ಆದರೆ ಕಷ್ಟಪಡಲೇಬೇಕಾಗುತ್ತದೆ. ಯಾರು ಭಗವಂತನನ್ನು ಮಾತ್ರವೇ ಪ್ರೀತಿಸುತ್ತಾನೋ ಅವನೇ ಧನ್ಯ. ಭಗವಂತನನ್ನು ಪ್ರೀತಿಸುವವನು ಕಷ್ಟಗಳಿಗೆ ಗುರಿಯಾಗುವುದಿಲ್ಲ.”
“ಬೇರೆಯವರಿಗಾಗಿ ನಿನ್ನ ಕರ್ತವ್ಯಗಳನ್ನು ಏನೇನು ಇರುತ್ತವೆಯೋ ಅವೆಲ್ಲವನ್ನೂ ಮಾಡು. ಆದರೆ ನಿನ್ನ ಪ್ರೀತಿಯನ್ನು ಭಗವಂತನಿಗೆ ಮಾತ್ರ ಕೊಡು. ಪ್ರಾಪಂಚಿಕ ಪ್ರೀತಿ ತನ್ನೊಂದಿಗೆ ಹೇಳಲಾಗದಷ್ಟು ಸಂಕಟವನ್ನು ತರುತ್ತದೆ.”
“ಆಸೆಯೇ ಎಲ್ಲಕ್ಕೂ ಕಾರಣ. ಆಸೆಯಿಲ್ಲದವನಿಗೆ ಯಾವ ಬಂಧನವಿದೆ? ನೋಡು, ನಾನು ಇವೆಲ್ಲದರ ಮಧ್ಯೆ ಇದ್ದೇನೆ. ಆದರೆ ನಾನು ಅವಕ್ಕೆ ಸ್ವಲ್ಪವೂ ಅಂಟಿಕೊಂಡಿಲ್ಲ. ಸ್ವಲ್ಪ ಕೂಡ ಅಂಟಿಕೊಂಡಿಲ್ಲ.”
“ಯಾವುದು ಆಕರ್ಷಿಸುತ್ತಿದೆಯೋ ಆ ಹೊರಗಡೆಯ ವಸ್ತು ಅಶಾಶ್ವತ ಎಂದು ಕಂಡುಕೊಳ್ಳಲು ಪ್ರಯತ್ನಿಸು. ನಿನ್ನ ಗಮನವನ್ನು ಭಗವಂತನ ಕಡೆಗೆ ಹರಿಸು.”
“ಸಂಸಾರದಲ್ಲಿ ಸುಖವೂ ಇದೆ, ದುಃಖವೂ ಇದೇ. ಹೀಗಿರುವಾಗ ಅದರ ಬಗ್ಗೆ ಸುಮ್ಮನೆ ತಲೆಕೆಡಿಸಿಕೊಂಡು ಮನಸ್ಸಿನ ಬಲವನ್ನೇಕೆ ಕಳೆದುಕೊಳ್ಳಬೇಕು.”
“ಮಗು, ನೀನು ಸಂಸಾರದಲ್ಲಿ ಇದ್ದರೆ ತಾನೇ ಏನಂತೆ? ಸಂಸಾರದಲ್ಲಿ ಇರುವುದು ಎಂದರೆ ನಿನ್ನ ಪಾಲಿಗೆ ಮರದ ನೆರಳಿನಲ್ಲಿ ಇದ್ದಂತೆ. ಸಂಸಾರವೇನು ದೇವರಿಂದ ಬೇರೆಯೇ? ದೇವರು ಎಲ್ಲೆಲ್ಲೂ ಇದ್ದಾನೆ.... ದೇವರು ನಿನ್ನನ್ನು ಎಲ್ಲಿಟ್ಟಿರುವನೋ ಅಲ್ಲೇ ತೃಪ್ತಿಯಿಂದಿರು. ದೇವರನ್ನು ಕರೆಯುವುದು, ಅವನನ್ನು ಪಡೆಯುವುದು, ಇದೇ ಗುರಿ. ನೀನು ಅವನನ್ನು ಕರೆದರೆ, ಅವನು ಕೈಹಿಡಿದು ನಡೆಸುತ್ತಾನೆ. ಅವನನ್ನು ನಂಬು. ನಿನಗೆ ಯಾವ ಭಯವೂ ಇರುವುದಿಲ್ಲ.”
ಶ್ರೀಮಾತೆ ಶಾರದಾ ದೇವಿ ಅವರು ತಮ್ಮ ಬಹುತೇಕ ದಿನಗಳನ್ನು ಕಲ್ಕತ್ತಾ ಮತ್ತು ಜಯರಾಂಬಟಿಗಳಲ್ಲಿ ಕಳೆದರು. ಜುಲೈ 20, 1920ರಂದು ತಮ್ಮ ಇಹಲೋಕದ ಬದುಕಿಗೆ ಮುಕ್ತಾಯ ಹೇಳಿದರು. ಬೇಲೂರು ಮಠದ ಆವರಣದಲ್ಲಿ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಅವರ ದೇಗುಲ ನಿರ್ಮಿಸಲಾಗಿದೆ.
ಶ್ರೀ ಶಾರದಾ ದೇವಿ ನಿಮಗೆ ನನ್ನ ನಮೋ ನಮಃ

ಭಕ್ತಿಯಿಂದ 
ಅಕ್ಷಯ್ ಜಿ ಭಟ್

Tuesday 2 January 2018

Found in Facebook

ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು.....
ಊಟಕ್ಕೆ ಎಷ್ಟಾಗುತ್ತದೆ?
ಮಾಲಿಕ ಉತ್ತರಿಸಿದರು....
ಮೀನು ಬೇಕಿದ್ದರೆ 50 ರೂಪಾಯಿ, ಮೀನು ಬೇಡವಾದರೆ 20 ರೂಪಾಯಿ....
ಆ ವ್ಯಕ್ತಿ ತನ್ನ ಹರಿದ ಅಂಗಿಯ ಕಿಸೆಯಿಂದ ತೆಗೆದ ಹತ್ತು ರೂಪಾಯಿ ಯನ್ನು ಮಾಲಿಕನತ್ತ ಚಾಚುತ್ತಾ...
ನನ್ನ ಕೈಯಲ್ಲಿ ಇದುವೇ ಇರೋದು..
ಇದಕ್ಕೆ ಸಿಕ್ಕುವುದು ಕೊಟ್ಟರೆ ಸಾಕು.... ಬರೀ ಅನ್ನವಾದರೂ ಸಾಕು..
ಹಸಿವು ನೀಗಿದರೆ ಸಾಕು..
ನಿನ್ನೆ ಮಧ್ಯಾಹ್ನದಿಂದ ಏನೂ ತಿಂದಿಲ್ಲ....
ಅದು ಹೇಳಬೇಕಾದರೆ ಅವರ ಮಾತುಗಳು ತಡವರಿಸಿದವು....
ಹೋಟೆಲ್ ಮಾಲಿಕ ಮೀನು ಬಿಟ್ಟು ಬಾಕಿ ಎಲ್ಲಾ ಅವರಿಗೆ ಬಡಿಸಿದರು....
ನಾನು ಅವರು ಊಟ ಮಾಡುವುದನ್ನೇ ನೋಡಿ ನಿಂತೆ... ಅವರ ಕಣ್ಣಿನಿಂದ ಕಣ್ಣೀರು ಸಣ್ಣದಾಗಿ ಕೆಳ ಜಾರುತಿತ್ತು.ಅದನ್ನು ಉಜ್ಜಿಕೊಂಡು ಸಣ್ಣ ಮಗುವಿನಂತೆ ನಿಧಾನವಾಗಿ ಊಟಮಾಡುವುದನ್ನ ಕಂಡ ಪಕ್ಕದಲ್ಲಿ ಕುಳಿತ ವ್ಯಕ್ತಿ ಕೇಳಿದರು...
ನೀವ್ಯಾಕೆ ಅಳುತಿದ್ದೀರಾ?
ಅವರು ಕೇಳಿದ ವ್ಯಕ್ತಿಯ ಮುಖವನ್ನ ನೋಡಿ ಕಣ್ಣನ್ನು ಉಜ್ಜಿಕೊಂಡು ಹೇಳಿದರು....
ನನ್ನ ಕಳೆದು ಹೋದ ಜೀವನವನ್ನು ನೆನೆದು ಕಣ್ಣೀರು ಬಂತು.. ಮೂರು ಮಕ್ಕಳು ನನಗೆ ಎರಡು ಗಂಡು, ಒಂದು ಹೆಣ್ಣು...
ಮೂರು ಜನರಿಗೂ ಒಳ್ಳೆಯ ಕೆಲಸವಿದೆ... ನನಗೆ ಸಿಕ್ಕಿದ ಎಲ್ಲಾ ಸೌಭಾಗ್ಯ ವನ್ನು ನಾನು ಅವರಿಗೆ ನೀಡಿದೆ.... ಅದಕ್ಕಾಗಿ ನಾನು ಕಳೆದು ಕೊಂಡದ್ದು ನನ್ನ ಯೌವನ ವನ್ನು.... ಇಪ್ಪತ್ತೆಂಟು ವರುಷದ ಪ್ರವಾಸ ಜೀವನ.....
ಎಲ್ಲದಕ್ಕೂ ನನ್ನ ಬೆನ್ನೆಲುಬಾಗಿದ್ದ ಅವಳು ಮೊದಲೇ ನನ್ನನ್ನು ಒಂಟಿಯಾಗಿಸಿ ಹೊರಟು ಹೋದಳು.... ಆಸ್ತಿ ಪಾಲು ಮಾಡುವ ಸಂಧರ್ಭ ಎದುರಾಯಿತು ನನ್ನ ಮಕ್ಕಳು, ಸೊಸೆಯಂದಿರಿಗೆ. ಪಾಲು ಮಾಡುತಿದ್ದಂತೆ ನಾನು ಅವರಿಗೆ ಭಾರವಾಗತೊಡಗಿದೆ.... ಮುಟ್ಟಿದ್ದಕ್ಕೆಲ್ಲಾ ನನ್ನನ್ನು ದೂರಲಾರಂಭಿಸಿದರು... ನಾನು ಒಬ್ಬ ಮುದುಕನಲ್ವಾ? ಆ ಒಂದು ಪರಿಗಣನೆಯಾದರು ಕೊಡಬಹುದಿತ್ತಲ್ಲಾ? ಅದೂ ಇಲ್ಲ... ಅವರ ಅಹಾರ ಸೇವನೆಯ ನಂತರವೇ ನಾನು ಕುಳಿತುಕೊಳ್ಳುತಿದ್ದೆ. ಆದರೂ ಬಯ್ಯುತಿದ್ದರು.. ಆಹಾರವೆಲ್ಲಾ ಕಣ್ಣೀರು ಬಿದ್ದು ಉಪ್ಪುರಸ‌ವಾಗುತಿತ್ತು ತಿನ್ನುವಾಗ..ಮೊಮ್ಮಕ್ಕಳು ಕೂಡಾ ನನ್ನಲ್ಲಿ ಮಾತಾಡುತ್ತಿ ರಲಿಲ್ಲ... ಕಾರಣ ಮಾತನಾಡುವುದ ಕಂಡರೆ ಮಕ್ಕಳು ಅವರನ್ನು ಬಯ್ಯುತಿದ್ದರು... ಯಾವಾಗಲು ಅವರದು ಒಂದೇ ಮಾತು ಎಲ್ಲಿಗಾದರು ಹೊರಟು ಹೋಗಬಾರದೇ ಎಂದು...ಈ ಕಲ್ಲು ಭೂಮಿಯಲ್ಲಿ ರಾತ್ರಿ ಹಗಲು ಎನ್ನದೆ ಬೆವರು ಸುರಿಸಿ ದುಡಿದು ಉಂಟುಮಾಡಿದ ಹಣದಲ್ಲಿ , ತಿನ್ನದೆಯೂ ಮಲಗದೆಯೂ ನಾನೂ ಅವಳೂ ಕೂಡಿ ಇಟ್ಟ ಹಣದಲ್ಲಿ ಕಟ್ಟಿದ ಈ ಮನೆ... ಅವಳ ನೆನಪುಗಳು ಮಲಗಿರೋದು ಆ ಮನೆಯಲ್ಲಿಯೇ. ಆ ಮನೆ ಬಿಟ್ಟು ಹೋಗಲು ಮನಸ್ಸು ಕೇಳಲಿಲ್ಲ.
ಅದರೇ ಏನು ಮಾಡಲಿ ನಿನ್ನೆ ಹೊರಟು ಬಿಟ್ಟೆ... ಸೊಸೆಯ ಒಡವೆ ಕದ್ದೆ ಎಂದು ಕಳ್ಳನ ಪಟ್ಟ ಕಟ್ಟಿ ಮಗ ನನ್ನಲ್ಲಿ ಸಿಟ್ಟುಗೊಂಡ. ಆದರೆ ಹೊಡೆದಿಲ್ಲ ಅದೇ ನನ್ನ ಭಾಗ್ಯ. ... ಇನ್ನೂ ಮತ್ತೆ ಅಲ್ಲಿ ನಿಂತರೆ ಅದೂ ನಡೆಯಬಹುದು.. "ಅಪ್ಪನಿಗೆ ಹೊಡೆದ ಮಗ" ಎಂಬ ಹೆಸರು ಬರಬಾರದಲ್ಲ.,.. ನನಗೆ ಸಾಯಲು ಭಯವಿಲ್ಲ ಅಲ್ಲದೆ ಇನ್ನು ನಾನು ಯಾರಿಗಾಗಿ ಬದುಕಬೇಕು.
ಅವರು ಪೂರ್ತಿ ಊಟ ಮಾಡದೆ ಎದ್ದರು.. ತನ್ನಲ್ಲಿರುವ ಹತ್ತು ರೂಪಾಯಿ ಮಾಲಿಕರೆಡೆಗೆ ಚಾಚಿದರು.. ಮಾಲಿಕರೆಂದರು ಬೇಡ ಕೈಯಲ್ಲಿ ಇರಲಿ....
ಯಾವಾಗ ಬೇಕಿದ್ದರು ನೀವು ಇಲ್ಲಿಗೆ ಬರಬಹುದು...
ನಿಮಗಿರುವ ಊಟ ಇಲ್ಲಿ ಇರುತ್ತದೆ.
ಆದರೆ ಆ ವ್ಯಕ್ತಿ ಆ ಹತ್ತು ರೂಪಾಯಿ ಅಲ್ಲಿ ಇಟ್ಟು ಹೇಳಿದರು
ತುಂಬಾ ಸಂತೋಷವಾಯಿತು ನಿಮ್ಮ ಉಪಕಾರಕ್ಕೆ.. . ಏನೂ ತಿಳಿಯದಿರಿ..ಸ್ವಾಭಿಮಾನ ನನ್ನನ್ನು ಬಿಡುತ್ತಿಲ್ಲ.
ಬರ್ತೀನಿ ಇನ್ನೊಮ್ಮೆ ಕಾಣುವಾ ಎಂದು ಅವರ ಗಂಟನ್ನು ಎತ್ತಿಕೊಂಡು ಎಲ್ಲಿಗೆಂದಿಲ್ಲದೆ ಅವರಷ್ಟಕೆ ನಡೆದು ಹೋದರು...
ಆ ವ್ಯಕ್ತಿ ನನ್ನ ಮನಸಿಗೆ ಉಂಟು ಮಾಡಿದ ಆ ಗಾಯ ಈಗಲೂ ಒಣಗಲಿಲ್ಲ.
ಅದ್ಯಾಕೆ ಎಲ್ಲಾ ಹಸುರು ಎಲೆಗಳೂ ಒಂದು ದಿನ ಹಣ್ಣೆಲೆಯಾಗುತ್ತೆಂದು ಯಾರು ಚಿಂತಿಸುತ್ತಿಲ್ಲ.???
ಬೇಡದ್ದು ,ಬೇಕಾದದ್ದು ಕಳುಹಿಸಿ MB ಮುಗಿಸುವಾಗಲೂಇಂತಹ ಒಂದು ಕೂಡಾ ಷೇರು ಮಾಡಿ. ಯಾರಾದರು ಒಬ್ಬರ ಮನಸು ಬದಲಾದರೆ.....
ಸಾಕು
ಬದಲಾವಣೆ ನಮ್ಮಿಂದಲೇ ಆಗಲಿ

kalpataru day

ಜನವರಿ 1ರಂದು ಏನು ವಿಶೇಷವೆಂದು ಕೇಳಿದರೆ, ಸಣ್ಣ  ಮಕ್ಕಳೂ ‘ಹೊಸ ವರ್ಷ’ ಎಂದು ಹೇಳುತ್ತಾರೆ. ಅನೇಕರು ಇದನ್ನೊಂದು ಹಬ್ಬವನ್ನಾಗಿಯೂ ಆಚರಿಸಿ, ಹೊಸ ವರ್ಷವನ್ನು ಸ್ವಾಗತಿಸುವುದು ತಿಳಿದಿರುವ ಸಂಗತಿಯೇ.

ಸಾಮಾನ್ಯವಾಗಿ  ಕಲ್ಪತರು ದಿನ ಎಂದರೇನು ಎಂದು ಬಹುತೇಕ ಮಂದಿಗೆ ತಿಳಿದಿರಲಿಕ್ಕಿಲ್ಲ , ನಾ ಹಿಂದೂ ಎಂದು ಹಾರಾಡುವ ಬಹುತೇಕ ಹಿಂದೂ ಕಾರ್ಯಕರ್ತರಿಗೆ ತಿಳಿದಿಲ್ಲದ ಈ ದಿನದಾಸ್ ಮಹತ್ವ  ಮೋಜು, ಮಸ್ತಿ, ಕುಡಿಯೋದು, ಕುಣಿಯೋದರಲ್ಲೇ ಸಮಯ ಕಳಿಯುವ ನಮಗೆ ಈ ದಿನದ ಮಹತ್ವ ಹೇಗೆ ಗೊತ್ತಾಗುತ್ತದೆ? ನಮ್ಮದೇ ಸಂಸ್ಕೃತಿಯ ಕಲ್ಪತರು ದಿನಾಚರಣೆ ಮಾಡುವುದು ಬೇಡವೇ?

ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಕೊನೆಯ ದಿನಗಳನ್ನು ಕಲ್ಕತ್ತದ ಕಾಶಿಪುರದ ಉದ್ಯಾನಗ್ರಹದಲ್ಲಿ ಕಳೆದರು. ಅದು ವಿವೇಕಾನಂದರಾದಿ ಶಿಷ್ಯರ ಪಾಲಿಗೆ ಒಂದು ದೇವಾಲಯವು ಆಗಿದೆ; ಒಂದು ವಿಶ್ವವಿದ್ಯಾನಿಲಯವೂ ಆಗಿದೆ. ಕೆಲವೊಮ್ಮೆ ಅಲ್ಲಿ ತತ್ತ್ವಶಾಸ್ತ್ರಗಳ ಅಧ್ಯಯನ ನಡೆದರೆ, ಇನ್ನು ಕೆಲವೊಮ್ಮೆ ಭಕ್ತಿಭಾವದ ಹೊನಲು ಹರಿಯುತ್ತದೆ. ನರೇಂದ್ರನೂ ಅವನ ಸ್ನೇಹಿತರೂ ಸೇರಿ ಭಜನೆ ಪ್ರಾರ್ಥನೆ-ಧ್ಯಾನ ಮಾಡುತ್ತಾರೆ. ಶಿಷ್ಯರೆಲ್ಲ ಹೀಗೆ ಸಾಧನೆ ಮಾಡಿ ಭಗವಂತನ ಕೃಪೆಯನ್ನು ಬೇಡಿದಾಗ, ಆ ದೇವಾಲಯದ ದೇವಮೂರ್ತಿ ಶ್ರೀರಾಮಕೃಷ್ಣರು ಅನುಗ್ರಹ ಮಾಡುವ ರೀತಿ ಅಪೂರ್ವ.


ಅಂದು 1886ನೇ ವರ್ಷದ ಜನವರಿ ಒಂದನೇ ತಾರೀಕು. ಇಂಗ್ಲೀಷ್ ವರ್ಷದ ಮೊದಲನೇ ದಿನ. ರಜಾದಿನ. ಅಂದು ಹಲವಾರು ಜನ ಭಕ್ತರು ಶ್ರೀರಾಮಕ್ರಷ್ಣರ ದರ್ಶನಕ್ಕೆ ಕಾಶಿಪುರಕ್ಕೆ ಬಂದಿದ್ದರು. ಶ್ರೇಷ್ಠ ಭಕ್ತ ಗಿರೀಶಚಂದ್ರನೂ ಬಂದಿದ್ದ. ಆಗ ಶ್ರೀರಾಮಕೃಷ್ಣರು ನೇರವಾಗಿ ಅವನ ಕಡೆಗೆ ಬಂದು ಕೇಳಿದರು. “ಗಿರೀಶ್, ನೀನು ನನ್ನ ವಿಷಯವಾಗಿ ಎಲ್ಲರ ಮುಂದೆ ಏನೇನೊ (ಅವರು ಅವತಾರ ಪುರುಷರು ಎಂದು) ಸಾರುತ್ತಿದ್ದೀಯಲ್ಲ. ನೀನು ಅಂಥಾದ್ದೇನನ್ನು ಕಂಡೆ ನನ್ನಲ್ಲಿ?”

ಈ ಪ್ರಶ್ನೆಗೆ ಗದ್ಗದ ಧ್ವನಿಯಲ್ಲಿ ಉತ್ತರಿಸಿದ ಗಿರೀಶ್ “ಯಾರ ಮಹಿಮೆಯನ್ನು ವರ್ಣಿಸುವಲ್ಲಿ ವ್ಯಾಸ-ವಾಲ್ಮೀಕಿಗಳೂ ಅಸಮರ್ಥರಾಗಿದ್ದಾರೋ ಅಂತಹ ಮಹಾಮಹಿಮನ ವಿಚಾರವಾಗಿ ನನ್ನಂಥವನು ಏನು ತಾನೆ ಹೇಳಬಲ್ಲ!” ಎಂದು. ಇದನ್ನು ಕೇಳಿದೊಡನೇ ಶ್ರೀರಾಮಕೃಷ್ಣರು ಭಾವವುಕ್ಕಿ ಬಂದು ಗಾಢ ಸಮಾಧಿಸ್ಥರಾಗಿ ಬಿಟ್ಟರು. ಗಿರೀಶ್ ಇದನ್ನು ಕಂಡು ಆನಂದಭರಿತನಾಗಿ “ಜೈ ಶ್ರೀರಾಮಕೃಷ್ಣ! ಜೈ ಶ್ರೀರಾಮಕೃಷ್ಣ!” ಎಂದು ಘೋಷಿಸುತ್ತ ಅವರ ಪಾದಧೂಳಿಯನ್ನು ತೆಗೆದುಕೊಂಡು ಹಣೆಗಿಟ್ಟುಕೊಂಡ. ಆಗ ಶ್ರೀರಾಮಕೃಷ್ಣರು ಮಂದಸ್ಮಿತವದನರಾಗಿ “ನಾನಿನ್ನೇನು ತಾನೆ ಹೇಳಲಿ! ನಿಮಗೆಲ್ಲರಿಗೂ ಆಧ್ಯಾತ್ಮಿಕ ಜಾಗೃತಿಯುಂಟಾಗಲಿ!” ಎಂದು ಗದರಿಸಿದರು. ತಮ್ಮ ಬಳಿಗೆ ಬಂದ ಪ್ರತಿಯೊಬ್ಬನ ಎದೆಯನ್ನೂ ಮುಟ್ಟಿ ‘ನಿನಗೆ ಆತ್ಮಜಾಗೃತವಾಗಲಿ’ ಎಂದು ಹರಸಿದರು. ಹೀಗೆ ಭಕ್ತರೆಲ್ಲ ತಮ್ಮ ಮನೋರಥಗಳನ್ನು ಪೂರೈಸುವ ಕಲ್ಪತರುವಿನ ಕೃಪೆಗೆ ಪಾತ್ರರಾದರು. (ಇಂದಿಗೂ ಜನವರಿ ಒಂದರಂದು ಕಾಶೀಪುರದ ಆ ದಿವ್ಯ ಉದ್ಯಾನದಲ್ಲಿ ಲಕ್ಷಗಟ್ಟಲೆ ಜನ ಸೇರಿ ಅತ್ಯುತ್ಸಾಹದಿಂದ ‘ಕಲ್ಪತರು ದಿನಾಚರಣೆ’ಯನ್ನು ನೇರವೆರಿಸುತ್ತಾರೆ).

Monday 1 January 2018

ಶ್ರೀ ರಾಮಕೃಷ್ಣ ಪರಮಹಂಸರ ಕುರಿತಾದ ಮಾಹಿತಿ

ಶ್ರೀ ರಾಮಕೃಷ್ಣ ಪರಮಹಂಸರ ಕುರಿತಾದ ಮಾಹಿತಿ ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆದ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸ್ವಾಮಿ ಶಾಂತಿವ್ರತಾನಂದ ಅವರಿಂದ ,ವಿಜಯವಾಣಿಯ ನಿನ್ನೆಯ ಪತ್ರಿಕೆಯಲ್ಲಿ ಪ್ರಕಟವಾದದ್ದು ನನ್ನ ಕಣ್ಣಲ್ಲಿ ಸೆರೆಯಾದಾಗ ....